ಒಂದು ಕಡೆ ಕೇಂದ್ರ ಸರ್ಕಾರವು ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ನಡೆಯಲಿರುವ ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದರೆ ಮತ್ತೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಗೆ ಶುಭಾಶಯ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪಾಕ್ ಪ್ರಧಾನಿಯೇ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಇಮ್ರಾನ್ ಖಾನ್ ಈ ಕುರಿತಂತೆ ಎರಡು ಟ್ವೀಟ್ ಮಾಡಿದ್ದಾರೆ.
“ಪ್ರಧಾನ ಮಂತ್ರಿ ಮೋದಿಯವರಿಂದ ಸಂದೇಶ ಸ್ವೀಕರಿಸಿದೆ. ಆ ಸಂದೇಶದಲ್ಲಿ ಮೋದಿ ಹೀಗೆ ಹೇಳಿದ್ದಾರೆ, “ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆ ಪ್ರಯುತ್ಕ ನಾನು ಪಾಕಿಸ್ತಾನದ ಜನತೆಗೆ ಶುಭಾಶಯ ಕೋರುತ್ತೇನೆ. ಒಂದು ಪ್ರಜಾತಾಂತ್ರಿಕ, ಶಾಂತಿನೆಮ್ಮದಿಯ, ಪ್ರಗತಿದಾಯಕ ಹಾಗೂ ಸಮೃದ್ಧ ಪ್ರದೇಶದ ನಿರ್ಮಾಣಕ್ಕಾಗಿ ಭಯ ಹಾಗೂ ಹಿಂಸೆ ಇಲ್ಲದ ವಾತಾವರಣದಲ್ಲಿ ಉಪಖಂಡದ ಜನರು ಒಟ್ಟಾಗಿ ಕೆಲಸ ಮಾಡಲು ಇದು ಸಕಾಲವಾಗಿದೆ”
Received msg from PM Modi: "I extend my greetings & best wishes to the people of Pakistan on the National Day of Pakistan. It is time that ppl of Sub-continent work together for a democratic, peaceful, progressive & prosperous region, in an atmosphere free of terror and violence"
— Imran Khan (@ImranKhanPTI) March 22, 2019
ಫೆ14ರಂದು ಪುಲ್ವಾಮಾ ಉಗ್ರ ದಾಳಿ ನಡೆದು, ನಂತರ ಬಾಲಾಕೋಟ್ ವಾಯುಗಾಳಿ, ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ವಶದಂತಹ ಘಟನೆಗಳು ನಡೆದು ಭಾರತ-ಪಾಕಿಸ್ತಾನಗಳ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿರುವ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಈ ಸಂದೇಶ ಪಾಕ್ ಪ್ರಧಾನಿಗೆ ಹೋಗಿದೆ
ಪ್ರಧಾನಿ ಮೋದಿಯವರಿಂದ ಮೇಲಿನ ಸಂದೇಶ ಬಂದಿದೆ ಎಂದು ತಿಳಿಸಿರುವ ಇಮ್ರಾನ್ ಖಾನ್ ಅದಕ್ಕೆ ಪ್ರತಿಯಾಗಿ ವಂದಿಸಿ ತಮ್ಮ ಸಂದೇಶವನ್ನೂ ತಿಳಿಸಿದ್ದಾರೆ.
“ನಮ್ಮ ಜನತೆಗೆ ಪ್ರಧಾನ ಮಂತ್ರಿ ಮೋದಿಯವರ ಸಂದೇಶವನ್ನು ನಾನು ಸ್ವೀಕರಿಸುತ್ತೇನೆ. ಪಾಕಿಸ್ತಾನ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಎಲ್ಲಾ ವಿಷಯಗಳನ್ನು, ಅದರಲ್ಲೂ ಕಾಶ್ಮೀರದ ಸಮಸ್ಯೆಯನ್ನು ಚರ್ಚಿಸಲು ಭಾರತದೊಂದಿಗೆ ಸಮಗ್ರ ಮಟ್ಟದ ಮಾತುಕತೆಗೆ ತೊಡಗಲು, ಈ ಮೂಲಕ ಜನತೆಗೆ ಬೇಕಾದ ಶಾಂತಿ ಹಾಗೂ ಸಮೃದ್ಧಿಯನ್ನಾಧರಿಸಿದ ಒಂದು ಹೊಸ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸೂಕ್ತ ಸಮಯವಾಗಿದೆ ಎಂದು ನಾನು ನಂಬಿದ್ದೇನೆ”
I welcome PM Modi's message to our people. As we celebrate Pakistan Day I believe it is time to begin a comprehensive dialogue with India to address & resolve all issues, esp the central issue of Kashmir, & forge a new relationship based on peace & prosperity for all our people.
— Imran Khan (@ImranKhanPTI) March 22, 2019
ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಿರುವುದನ್ನು ಭಾರತವು ವಿರೋಧಿಸಿದೆ. ಪಾಕಿಸ್ತಾನದಲ್ಲಿಯೂ ಸಹ ಭಾರತದ ರಾಯಭಾರಿಗಳು ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹುರಿಯೆತ್ ಕಾನ್ಫರೆನ್ಸ್ ಸಂಘಟನೆಯ ಯಾವುದೇ ಪ್ರಮುಖ ನಾಯಕನನ್ನು ಕಾರ್ಯಕ್ರಮದಲ್ಲಿ ಆಹ್ವಾನಿಸುವುದಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.
ಪ್ರತಿವರ್ಷ ನವದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಮಾರ್ಚ್ 23ರಂದು ಆಚರಿಸುವ ಪಾಕಿಸ್ತಾನ ದಿನಾಚರಣೆಗೆ ಭಾರತ ಸರ್ಕಾರದ ಕೇಂದ್ರ ಸಚಿವರೊಬ್ಬರು ಹಾಜರಾಗುತ್ತಿದ್ದರು. ಈ ಸಲ ಮಾತ್ರ ಯಾರೂ ಭಾಗವಹಿಸುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು.
ಹೀಗಿರುವಾಗಲೇ ಪ್ರಧಾನ ಮಂತ್ರಿಯವರಿಂದ ಪಾಕ್ ಪ್ರಧಾನಿಗೆ ಶುಭಾಶಯ ಸಂದೇಶ ಹೋಗಿರುವುದು ಅಚ್ಚರಿ ತಂದಿದೆ