ಸುಲ್ತಾನಪುರ, ಯುಪಿ: ಯಾವಾಗಲೂ ತನ್ನ ಅತಿರೇಕದ ಮಾತುಗಳಿಂದಲೇ ವಿವಾದ ಸೃಷ್ಟಿಸುವ ಬಿಜೆಪಿ ಸಂಸದ ವರುಣ್ ಗಾಂಧಿ ಬಹುಜನ ಸಮಾಜ ಪಕ್ಷ-ಸಮಾಜವಾದಿ ಮೈತ್ರಿಕೂಟದ ಸುಲ್ತಾನಪುರ ಅಭ್ಯರ್ಥಿಯ ಕುರಿತು ನಿಂದನಾತ್ಮಕ ಮಾತಾಡಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. “ಅವರಿಂದ (ಬಿಎಸ್ ಪಿ-ಎಸ್ಪಿ ಅಭ್ಯರ್ಥಿ) ನನ್ನ ಶೂ ಲೇಸ್ ಬಿಚ್ಚಿಸುತ್ತೇನೆ” ಎಂದು ವರುಣ್ ಗಾಂಧಿ ಆಡಿರುವ ಮಾತು ವಿವಾದ ಸೃಷ್ಟಿಸಿದೆ.
ಶನಿವಾರ ಸುಲ್ತಾನಪುರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಫಿಲ್ಬಿಟ್ ಕ್ಷೇತ್ರದ ಅರ್ಥಿಯಾಗಿರುವ ವರುಣ್ ಗಾಂಧಿ, “ಗೌರವ ಇಲ್ಲದ ಮನುಷ್ಯ ಸತ್ತಂತೆ. ದೇವರಿಗೆ ಬಿಟ್ಟರೆ ಯಾರಿಗೂ ಹೆದರಬೇಡಿ ಎನ್ನುತ್ತೇನೆ. ನಿಮಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಾನಿಲ್ಲಿ ನಿಂತಿದ್ದೇನೆ. ನಾನು ಸಂಜಯ್ ಗಾಂಧಿ ಮಗ. ಅಂತವರಿಂದ ನನ್ನ ಶೂ ಲೇಸ್ ಬಿಚ್ಚಿಸುತ್ತೇನೆ” ಎಂದು ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿ ಅಭ್ಯರ್ಥಿಯಾಗಿ ಚಂದ್ರ ಭದ್ರ ಸಿಂಗ್ (ಸೋನು ಸಿಂಗ್) ಅಭ್ಯರ್ಥಿಯಾಗಿದ್ದಾರೆ.
ಎಎನ್ಐ ಸುದ್ದಿಸಂಸ್ಥೇ ವರದಿ ಮಾಡಿರುವ ವಿಡಿಯೋ ತುಣುಕೊಂದರಲ್ಲಿ ವರುಣ್ ಗಾಂಧಿ ಸುಲ್ತಾನಪುರ ಲೋಕಸಭಾ ಕ್ಷೇತ್ರದಲ್ಲಿ ತನ್ನ ತಾಯಿ ಮನೇಕಾ ಗಾಂಧಿ ಪರ ಚುನಾವಣಾ ಭಾಷಣದಲ್ಲಿ ಮೇಲಿನಂತೆ ಹೇಳಿರುವುದು ದಾಖಲಾಗಿದೆ.
#WATCH BJP LS candidate from Pilibhit, Varun Gandhi in Sultanpur says, "Mai ek hi cheez aapko kehna chahta hoon, kisi se darne ki koi zarurat nahi hai….Mai khada hoon yaha pe, mai Sanjay Gandhi ka ladka hoon, mai in logon se apne jute khulvata hoon" (2.4.19) pic.twitter.com/LnA8kVDivu
— ANI UP (@ANINewsUP) May 4, 2019
ಕೆಲವೇ ದಿನಗಳ ಹಿಂದೆ ಮನೇಕಾ ಗಾಂಧಿಯವರನ್ನು ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣದಲ್ಲಿ 48 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧಿಸುತ್ತು. ಮುಸ್ಲಿಮರು ನನಗೆ ಓಟು ಹಾಕದಿದ್ದರೆ ಅವರು ಕೆಲಸ ಕೇಳಿ ಬಂದಾಗ ನಾನು ಯೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಮನೇಕಾ ಗಾಂಧಿ ತಮ್ಮ ಕ್ಷೇತ್ರವನ್ನು ಜನರು ತಮಗೆ ಓಟು ಹಾಕಿದ ಆಧಾರದಲ್ಲಿ ಎ,ಬಿ,ಸಿ,ಡಿ ಎಂದು ವಿಭಜಿಸಿ ಅದರಂತೆ ಕೆಲಸ ಮಾಡುವುದಾಗಿ ಹೇಳಿದ್ದರು. ಇದು ಸಂವಿಧಾನ ವಿರೋದಿ ನಡೆಯಾಗಿತ್ತಲ್ಲದೇ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.
ಅಮ್ಮನ ನಂತರ ಈಗ ಮಗ ವರುಣ್ ಗಾಂಧಿ ಮನೇಕಾ ಗಾಂಧಿಯವರ ಪ್ರತಿಸ್ಪರ್ಧಿ ಕುರಿತು ತುಚ್ಛವಾಗಿ ಮಾತನಾಡಿ ತಮ್ಮ “ಸಂಸ್ಕೃತಿ” ಮೆರೆದಿದ್ದಾರೆ.