ಬೆಂಗಳೂರು- ಹಾಲಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಅಧಿಕಾರಾವಧಿ ಆಗಸ್ಟ್ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿರುವ ಬೆನ್ನಲ್ಲೇ ತೆರವಾಗಲಿರುವ ಈ ಸ್ಥಾನಕ್ಕೆ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಮಾಜಿ ಸಚಿವರಾದ ಉಮಾಭಾರತಿ ಹಾಗೂ ಸುಷ್ಮಾಸ್ವರಾಜ್ ಹೆಸರುಗಳು ಕೇಳಿ ಬಂದಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಹಲವು ರಾಜ್ಯಗಳ ರಾಜ್ಯಪಾಲರನ್ನು ಬದಲಾವಣೆ ಮಾಡಲು ಮುಂದಾಗಿದ್ದು, ಇದೇ ವೇಳೆ ರಾಜ್ಯಕ್ಕೆ ನೂತನ ರಾಜ್ಯಪಾಲರನ್ನು ನೇಮಕ ಮಾಡುವ ಸಂಭವಿದೆ ಎನ್ನಲಾಗಿದೆ.
2019ರಲ್ಲಿ ರಚನೆಯಾದ ಎನ್ ಡಿಎ ಸರ್ಕಾರದ ಸಚಿವ ಸಂಪುಟ ರಚಿಸುವ ವೇಳೆ ಅನಾರೋಗ್ಯದ ಕಾರಣದಿಂದಾಗಿ ಸುಷ್ಮಾಸ್ವರಾಜ್ ಅವರು ಸಂಪುಟಕ್ಕೆ ಸೇರ್ಪಡೆಯಾಗಲು ಹಿಂದೇಟು ಹಾಕಿದ್ದರು. ಇಂಥ ಸಂದರ್ಭದಲ್ಲಿ ಅವರು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ತೀರಾ ಕಡಿಮೆ. ಅಲ್ಲದೆ, ಸುಷ್ಮಾಸ್ವರಾಜ್ ಅವರು ಬಿಜೆಪಿಯ ಮಾಜಿ ಸಚಿವ ಜನಾರ್ಧನರೆಡ್ಡಿ, ಶಾಸಕ ಶ್ರೀರಾಮುಲು, ಕರುಣಾಕರರೆಡ್ಡಿ ಜತೆ ಗುರುತಿಸಿಕೊಂಡಿದ್ದರು. ಹೀಗಾಗಿ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡುವ ಸಾಧ್ಯತೆ ಇಲ್ಲ ಎಂದೂ ಸಹ ಊಹಾಪೋಹಗಳು ಕೇಳಿಬಂದಿದೆ.
ಆದರೆ ಕರ್ನಾಟಕದ ಬಗ್ಗೆ ಸುಷ್ಮಾಸ್ವರಾಜ್ಗೆ ಸಮಗ್ರ ಮಾಹಿತಿ ತಿಳಿದಿರುವ ಕಾರಣ ಕೊನೆ ಕ್ಷಣದಲ್ಲೂ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಇನ್ನೊಂದು ಮೂಲಗಳ ಪ್ರಕಾರ ಕೇಳಿ ಬಂದಿದೆ.
ಮಾಜಿ ಸಚಿವೆ ಉಮಾಭಾರತಿ ಸದ್ಯ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಮಧ್ಯ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ. ಅಲ್ಲದೆ, ಉಮಾಭಾರತಿಗೆ ಕರ್ನಾಟಕದೊಂದಿಗೆ ಸಾಕಷ್ಟು ಒಡನಾಟ ಇರುವುದರಿಂದ ರಾಜ್ಯಪಾಲರ ಹುದ್ದೆಗೆ ಪಕ್ಷದ ವರಿಷ್ಠರು ಪರಿಗಣಿಸುವ ನಿರೀಕ್ಷೆ ಇದೆ ಎಂದೂ ಹೇಳಲಾಗುತ್ತಿದೆ.
ಈ ಇಬ್ಬರ ನಡುವೆ ಕಳೆದ ಸರ್ಕಾರದ ಅವಧಿಯಲ್ಲಿ ಲೋಕಸಭೆಯ ಸ್ಪೀಕರ್ ಆಗಿ, ಎಲ್ಲರನ್ನು ಹಿಡಿತದಲ್ಲಿಟ್ಟುಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದ ಸುಮಿತ್ರಾ ಮಹಾಜನ್ ಅವರನ್ನು ಕರ್ನಾಟಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಆರ್ಎಸ್ಎಸ್ ಮತ್ತು ಬಿಜೆಪಿ ಬೆಂಬಲಿಗರಾಗಿರುವ ಸುಮಿತ್ರಾ ಮಹಾಜನ್ ಪಕ್ಷದ ವಲಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದು ಇವರ ಹೆಸರನ್ನು ಸೂಚಿಸಿದರೂ ಸಂಶಯವಿಲ್ಲ.
ಇದೆಲ್ಲದರ ಮಧ್ಯೆ ಹಾಲಿ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅವರು ಮತ್ತೊಂದು ಅವಧಿಗೆ ರಾಜ್ಯಪಾಲರಾಗಿ ಮುಂದುವರೆಯುವ ಇಂಗಿತವನ್ನು ಪಕ್ಷದ ವರಿಷ್ಠರ ಬಳಿ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಆದರೆ, ವಯಸ್ಸಿನ ಕಾರಣದಿಂದ ಅವರ ಈ ಬೇಡಿಕೆಯನ್ನು ಪರಿಗಣಿಸುವ ಸಾಧ್ಯತೆ ಕ್ಷೀಣಿಸಿದೆ ಎಂದು ಹೇಳಲಾಗಿದೆ.