ಬೆಂಗಳೂರು: ಜ್ಙಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಇಂದು ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಅಸುನೀಗಿದ್ದಾರೆ.
ಗಿರೀಶ್ ಕಾರ್ನಾಡ್ ಅವರ ಅಂತಿಮ ಸಂಸ್ಕಾರ ಯಾವುದೇ ವಿಧಿ ವಿಧಾನಗಳಿಲ್ಲದೆ 3 ಗಂಟೆಗೆ ಬೈಯಪ್ಪನಹಳ್ಳಿ, ಕಲ್ಪಲ್ಲಿ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ, ಅವರ ಪಾರ್ಥಿವ ಶರೀರ ದರ್ಶನಕ್ಕೆ ಯಾವುದೇ ವಿಶೇಷ ವ್ಯವಸ್ಥೆಗಳಿಲ್ಲ, ಅಂತಿಮ ಗೌರವ ಸಲ್ಲಿಸುವವರು ಅಲ್ಲಿಗೇ 2.30ರ ಹೊತ್ತಿಗೆ ಬಂದು ಸಲ್ಲಿಸಬಹುದು ಎಂದು ಗಿರೀಶ್ ಕಾರ್ನಾಡ್ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರು.
ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ ಮಾಡಿದವರು.
ಗಿರೀಶ್ ಕಾರ್ನಾಡರು 1938 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿರುವರು.
ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ ಸಿನಿಮಾಗಳು; ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು. ಹಾಗಾಗಿ ಅವರಿಗೆ ಸಂದ ಈ ಗೌರವ ಕಾರ್ನಾಡರಿಗೆ ಮಾತ್ರವಾಗಿರದೆ ಅದು ಇಡೀ ಭಾರತೀಯ ರಂಗಭೂಮಿಗೆ ಬಂದ ಗೌರವವೆಂದು ಪರಿಗಣಿತವಾಯಿತು. ಕನ್ನಡ ರಂಗಭೂಮಿಯ ಪತಾಕೆ ಮತ್ತಷ್ಟು ಎತ್ತರದಲ್ಲಿ ಹಾರಲು ಪುಷ್ಟಿಯನ್ನು ಒದಗಿಸಿಕೊಟ್ಟಿತು.
ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದವರ ಕೃತಿಗಳು ಪ್ರಶಸ್ತಿ ಬಂದ ಮೇಲೆ ಕೃತಿಗಳ ಮೂಲಭಾಷೆಯಿಂದ ಇತರ ಭಾಷೆಗಳಿಗೆ ಅನುವಾದಿತವಾಗುವುದು ಸರ್ವೇ ಸಾಮಾನ್ಯವಾದರೆ ಕಾರ್ನಾಡರ ಕೃತಿಗಳು ಪ್ರಶಸ್ತಿ ಬರುವ ಮುಂಚೆಯೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಿತವಾಗಿ, ಆ ಭಾಷೆಗಳಲ್ಲಿ ಪ್ರಯೋಗವೂ ಆಗಿ ಯಶಸ್ವಿಯಾಗಿದ್ದವು, ಇಂಗ್ಲಿಷ್ ಭಾಷೆಯೂ ಸೇರಿದಂತೆ. ಪ್ರಯೋಗ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇಬ್ರಾಹಿಂ ಅಲ್ಕಾಜಿಯವರು ನಿರ್ದೇಶಿಸಿದ ‘ತುಘಲಕ್’ ವಿದೇಶ ಸಂಚಾರವನ್ನೇ ಕೈಗೊಂಡಿತ್ತು. ‘ಹಯವದನ’ ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ಅಲ್ಲಿನವರಿಂದಲೇ ಪ್ರಯೋಗಗೊಂಡಿತ್ತು. ‘ನಾಗಮಂಡಲ’ವನ್ನು ಅಮೆರಿಕದ ಗಥ್ರಿ ಥಿಯೇಟರಿನವರು ಪ್ರದರ್ಶಿಸಿದರು. ಹೀಗೆ ‘ಜ್ಞಾನಪೀಠ’ ಬರುವ ಮುನ್ನವೇ ಕಾರ್ನಾಡರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು.
ಕನ್ನಡ ರಂಗಭೂಮಿಯಂತೂ ಕಾರ್ನಾಡರಿಗೆ ಋಣಿಯಾಗಿದೆ. 70ರ ದಶಕದ ಬಯಲು ರಂಗೋತ್ಸವದ ಯಶಸ್ಸಿಗೆ ಅವರ ನಟನೆಯೂ ಒಂದು ಕಾರಣ. ಈಡಿಪಸ್ ನಾಟಕದಲ್ಲಿ ದೊರೆ ಈಡಿಪಸ್ ಪಾತ್ರವನ್ನು ಅವರೇ ವಹಿಸಿದ್ದರು. ಮುಂದೆ ಅವರು ರಂಗಭೂಮಿಯಲ್ಲಿ ನಟಿಸದಿದ್ದರೂ ಅವರ ನಾಟಕಗಳು ದೇಶವಿದೇಶಗಳಲ್ಲಿ ಯಶಸ್ವಿಯಾಗಿರುವಂತೆ ಕನ್ನಡದಲ್ಲೂ ಯಶಸ್ಸು ಕಂಡಿವೆ. 60ರ ದಶಕದಲ್ಲಿ ಅವರ ‘ತುಘಲಕ್’ ಪ್ರದರ್ಶನ ತುಘಲಕ್ ಪಾತ್ರವಹಿಸಿದ ಸಿ.ಆರ್. ಸಿಂಹರನ್ನು ಬೆಳಕಿಗೆ ತಂದದ್ದಲ್ಲದೆ ಹವ್ಯಾಸಿರಂಗಕ್ಕೆ ಹೊಸಜೀವ ಸಂಚಾರವನ್ನೇ ತಂದಿತು.
ಪುರಾಣ ಬಳಸಿ ಕಾರ್ನಾಡರು ಯಯಾತಿ ಬರೆದರು. ಇತಿಹಾಸ ಬಳಸಿ ತುಘಲಖ್ ಬರೆದರು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವು ಗಣ್ಯರು ಭಾರತೀಯ ರಂಗಭೂಮಿಯನ್ನು ಪಾಶ್ಚಾತ್ಯ ಪ್ರಭಾವದಿಂದ ಬಿಡಿಸಿ ಕಟ್ಟಬೇಕೆಂದು ಮಾಡಿದ ಆಲೋಚನೆ, ತೋರಿದ ಕಾಳಜಿಗೆ ಸ್ಪಂದಿಸಿದ ಕಾರ್ನಾಡರು ಜಾನಪದ ತಂತ್ರಗಳನ್ನು ಬಳಸಿ ‘ಹಯವದನ’ ಬರೆದರು.
ಪರಿಪೂರ್ಣತೆಯ ಆಕಾಂಕ್ಷೆಯನ್ನು ವಸ್ತುವಾಗುಳ್ಳ ‘ಹಯವದನ’ದಲ್ಲಿ ಜಾನಪದ ರಂಗದ ಮಹತ್ವವನ್ನು ಬಯಲುಗೊಳಿಸುವುದರ ಜೊತೆಗೆ ಕಾರ್ನಾಡರು ರಂಗಸಾಧ್ಯತೆಗಳನ್ನು ವಿಸ್ತರಿಸಿದರು. ದೇಶಾದ್ಯಂತ ಸತ್ಯ ದೇವ ಧುಬೆ, ಬಿ.ವಿ.ಕಾರಂತರಂತಹ ಹಲವಾರು ಶ್ರೇಷ್ಠ ನಿರ್ದೇಶಕರು ‘ಹಯವದನ’ವನ್ನು ನಿರ್ದೇಶಿಸಿ ಸ್ಪರ್ಧಿಸಿದರು. ಹಯವದನ ಅಖಿಲಭಾರತ ವ್ಯಾಪ್ತಿಯನ್ನು ಮೀರಿ ಆಸ್ಟ್ರೇಲಿಯಾದಲ್ಲೂ ಪ್ರಯೋಗ ಕಂಡಿತು. ಅನಂತರ ಅವರು ಬರೆದ ನಾಟಕಗಳಲ್ಲಿ ತಲೆದಂಡ, ನಾಗಮಂಡಲ ಕಾರ್ನಾಡರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಈ ಎಲ್ಲ ನಾಟಕಗಳು ವಿವಿಧ ಭಾಷೆಗಳಿಗೆ ತರ್ಜುಮೆಯಾಗಿ ಯಶಸ್ವೀ ಪ್ರಯೋಗ ಕಂಡಿದೆ. ‘ನಾಗಮಂಡಲ’ ಚಲನಚಿತ್ರ ರೂಪದಲ್ಲೂ ಜಯಗಳಿಸಿದೆ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ಅವರಿಂದಲೇ ಇಂಗ್ಲಿಷಿಗೆ ‘Fire and Rain’ ಆಗಿ ರೂಪುಗೊಂಡು ಆಂಗ್ಲ ರಂಗ ವಲಯದಲ್ಲಿ ಅಪರಿಮಿತವಾದ ಯಶಸ್ಸನ್ನು ಪಡೆಯಿತು. ‘ಅಂಜುಮಲ್ಲಿಗೆ’ ಹಿಂದಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿತು. ‘ತಲೆದಂಡ’ ಕಾರ್ನಾಡರ ಮಹತ್ವದ ಕೃತಿಗಳಲ್ಲೊಂದು.
ಬಿ. ವಿ. ಕಾರಂತರೊಡನೆ ಅವರು ನಿರ್ದೇಶಿಸಿದ ಚಿತ್ರಗಳು ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ. ಕಾರ್ನಾಡರು ಸ್ವಯಂ ನಿರ್ದೇಶಿಸಿದ ಚಿತ್ರಗಳು ಒಂದಾನೊಂದು ಕಾಲದಲ್ಲಿ, ಕಾಡು, ಕಾನೂರು ಹೆಗ್ಗಡತಿ, ಹಿಂದಿಯಲ್ಲಿ ಉತ್ಸವ್, ಚೆಲ್ವಿ ಇತ್ಯಾದಿ. ನಟರಾಗಿ ಶ್ಯಾಂ ಬೆನೆಗಲ್ ಅವರ ನಿಶಾಂತ್, ಮಂಥನ್, ಭೂಮಿಕಾ; ಶಂಕರ ನಾಗರ ಮಾಲ್ಗುಡಿ ಡೇಸ್, ಕನ್ನಡ ಮತ್ತು ತೆಲುಗಿನ ಆನಂದ ಭೈರವಿ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ್ ಹೀಗೆ ಹಲವಾರು ನೆನಪುಗಳು ಮರುಕಳಿಸುತ್ತವೆ. ಎಪ್ಪತ್ತರ ದಶಕದಲ್ಲಿ ಬಂದ ಮಹಾನ್ ಪ್ರತಿಭೆಗಳಾದ ನಾಸಿರುದ್ದೀನ್ ಷಾ, ಓಂ ಪುರಿ, ಗಿರೀಶ್ ಕಾಸರವಳ್ಳಿ ಮುಂತಾದ ಹಲವಾರು ಪ್ರಸಿದ್ಧರು ಗಿರೀಶರು ಪೂನಾ ಫಿಲಂ ಇನ್ಸ್ಟಿಟ್ಯೂಟಿನಲ್ಲಿದ್ದಾಗ ಮೂಡಿಬಂದವರು. ಓಂ ಪುರಿಯಂತವ ನಟನೆಗೆ ಯೋಗ್ಯನೆ ಎಂಬುದನ್ನು ಪ್ರಶ್ನಿಸಿದ್ದ ಅಂದಿನ ಕಾಲದಲ್ಲಿ ಆತನಲ್ಲಿದ್ದ ಪ್ರತಿಭೆಯನ್ನು ಕಂಡವರು ಗಿರೀಶ್. ಕನ್ನಡದಲ್ಲಿ ವಿಷ್ಣುವರ್ಧನ್, ಶಂಕರನಾಗ್, ಸಿ. ಆರ್. ಸಿಂಹ ಮುಂತಾದ ಅನನ್ಯ ಪ್ರತಿಭೆಗಳನ್ನು ಹುಡುಕಿಕೊಟ್ಟವರು ಕೂಡಾ ಗಿರೀಶರೆ. ಅವರು ಎಷ್ಟು ಪ್ರಾಜ್ಞರಾಗಿ ಕಲಾವಂತಿಕೆ ಹೊತ್ತ ಚಿತ್ರಗಳಲ್ಲಿ ನಟಿಸುತ್ತಾರೋ, ಅಷ್ಟೇ ಸರಾಗವಾಗಿ ಕನ್ನಡ, ತಮಿಳು, ಹಿಂದಿ, ಮಲಯಾಳ, ಮರಾಠಿ ಹೀಗೆ ವಿವಿದ ಭಾಷೆಗಳ ಕಮರ್ಷಿಯಲ್ ಹಣೆಪಟ್ಟಿಯ ಚಿತ್ರಗಳಲ್ಲೂ ಸರಾಗವಾಗಿ ಎಂಬಂತೆ ನಟಿಸಿಬರುವುದನ್ನು ಕಂಡು ಇವರ ಅಪ್ರತಿಮ ವೈವಿಧ್ಯತೆಯ ಕುರಿತಾಗಿ ಅಚ್ಚರಿಹುಟ್ಟುತ್ತದೆ.
ಗಿರೀಶರ ಆತ್ಮಚರಿತ್ರೆಯಾದ ‘ಆಡಾಡತ ಆಯುಷ್ಯ’ ನಮ್ಮ ಕಾಲದಲ್ಲಿ ಮೂಡಿ ಬಂದ ಹೊಸ ನಿಟ್ಟಿನ ಬದುಕಿನ, ನವ್ಯ ಕಾಲದ ಸಾಹಿತ್ಯ, ರಂಗಭೂಮಿ, ಸಿನಿಮಾ, ಲಲಿತ ಕಲೆ ಮತ್ತು ಸಾಂಸ್ಕೃತಿಕ ಜಗತ್ತಿನ ಬಹು ದೊಡ್ಡ ಜಗತ್ತನ್ನೇ ನಮ್ಮ ಕಣ್ಣೆದುರು ತೆರೆದಿಡುವಂತದ್ದಾಗಿದೆ.